21 August, 2009

ಮೂಲದ ಬೆಳಕಿನಲಿ.....

ಭಾವಗೀತೆಗಳನ್ನ ಹಾಡ್ತಾ ಮತ್ತೆ ಮತ್ತೆ ಅವನದೇ ನೆನಪಾಗ್ತಾ ಇತ್ತು ...."ಪ್ರತಿಯೊಂದು ಪದವನ್ನ ಅನುಭವಿಸಿ ಹಾಡುತ್ತೀಯಲ್ಲಕ್ಕಾ...you are simply great....ನಿನ್ನ ಪಾದದ xerox copy ಕೊಡು..enlarge ಮಾಡ್ಸಿ ಮನೆ ಗೋಡೆಗಳಿಗೆ ಹಾಕಿಬಿಡ್ತೀನಿ ಪ್ರತಿ ದಿನ ನಮಸ್ಕಾರ ಮಾಡೋಕೆ ಅನುಕೂಲ "....ಅಂತ ತಮಷೆ ಮಾಡುತ್ತಲೇ ಮನಸಾರೆ ಹೂಗಳ್ತಿದ್ದ ಅವನು.ನಿಜಕ್ಕೂ ಅನುಭವಿಸಿ ಹಾಡುತ್ತೇನ ?? ಅನುಭವಿಸೋದು ಅಂದ್ರೆ ಪದಗಳ್ನ ಅರ್ಥಮಾಡ್ಕೊಳ್ಲೋದ......ಅಥವಾ ಹಾಡಿನ ಭಾವದಲ್ಲಿ ಕರಗಿ ಹೋಗೋದ???.....ಉತ್ತರ ಅಸ್ಪಷ್ಟ.

ಆ ಹಾಡೆಂದರೆ ಅವ್ನಿಗೆ ಯಾವಾಗಲೂ ಪ್ರಾಣ....ಅದೆಷ್ಟು ಸಲ ಮತ್ತೆ ಮತ್ತೆ ನನ್ನಿಂದ ಆ ಹಾಡು ಹಾಡಿಸ್ತಿದ್ದ......"ಮಣ್ಣಿನಾಳಗಲ್ಲಿ ಕಣ್ಣನೂರಿದ ಜೀವ.....ಅನ್ನದ ಹುಡುಕಾಟ ಇನ್ನು ಸಾಕು....ನಿನ್ನೊಳಗೆ ನೀನಿನ್ನು ಮುಳುಗಬೇಕು....ನುಡಿಮೆಟ್ಟಿ ಅರ್ಥದಲಿ ಏಳಬೇಕು..".....

ತಪ್ಪಾಗಿದ್ದು ಅಲ್ಲೇ.....ಪದಗಳ ಅರ್ಥ ಗಮನಿಸಿ ಭಾವ ತುಂಬಿ ಹಾಡುವ ನನ್ನ ಪ್ರತಿಭೆಯನ್ನ, ಪದಗಳನ್ನೆಲ್ಲ ಅರಗಿಸಿಕೊಂಡು ಮೂಡಿದ ಪ್ರಭುದ್ದತೆ ಅಂತ ಭಾವಿಸಿಬಿಟ್ಟ. ನನಗಾದರೂ ಏನಾಗಿತ್ತು??........ಮಾನಸಿಕವಾಗಿ ನೊಂದಿರುವನ್ಥವರು , ಬುಧ್ಧಿಯನ್ನಉಪಯೋಗಿಸೋಕೆ ಸ್ವಲ್ಪ ಕಷ್ಟ ಪಡ್ತಾ ಇರೋರು ಯಾರದ್ರೂ ಬಂದು ಏನಾದರೂ ಸಲಹೆ ಕೇಳಿದಾಗ, ಅತಿ ಸೂಕ್ಷ್ಮವಾಗಿಯಾದರೂ ನಮ್ಮಲ್ಲಿ ಒಂದು ರೀತಿಯ ಅಹಂಕಾರ ಜಾಗೃತಗೊಂಡು ಬಿಡುತ್ತೆ. ಆ ಒಂದು ಕ್ಷಣ ನಾವು ಅವರಿಗಿಂತ ಹೆಚ್ಚು ಅಂದುಕೊಂಡೆ ಒಂಥರಾ ಉಪದೇಶ ಕೊಡೋಕೆ ಶುರು ಮಾಡ್ಬಿಡ್ತೀವಲ್ಲವ? ಅವತ್ತು ನಾನು ಮಾಡಿದ್ದು ಅದೇನಾ??.......

Especially ಆ ಹಾಡಿನ ಈ ಸಾಲುಗಳು ..."ಕಾಮನ ಬಿಲ್ಲಿನ ಬಣ್ಣ ಸೆಳೆದ ಕಣ್ಣ ಬೆರಗನ್ನು ತಿಳಿವಿನಲಿ ತೊಳೆಯಬೇಕು..... ಬಣ್ಣ ಬಣ್ಣವ ತೂರಿ ಹರಿಯಬೇಕು....ಹರಿದು, ಮೂಲದ ಬೆಳಕಿನಲಿ ಮೀಯಬೇಕು...".....ಲೆಕ್ಕವಿಲ್ಲದಷ್ಟು ಸಾರಿ ಚರ್ಚೆಮಾಡಿದ್ದ್ವಿ ಆ ಸಾಲುಗಳ ಬಗ್ಗೆ. ' ಅಕ್ಕ ನಿಮ್ಮ ಹಾಡಿನ ಈ ಸಾಲು ಎಲ್ಲಿಗೋ ಎಳ್ಕೊಂಡು ಹೋಗುತ್ತೆ... ಕೇಳ್ತಾ ಕೇಳ್ತಾ ಒಂಥರಾ ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡು ಹೋಗ್ಬಿಡುತ್ತೆ......ಕಾಮನ ಬಿಲ್ಲಿನ ಬಣ್ಣದಿಂದ ಸೆಳೆಯಲ್ಪತ್ತು ಉಂಟಾದ ಬೆರಗನ್ನ...ತಿಳಿವಿನಿಂದ ತೊಳೆಯಬೇಕು, ಬಣ್ಣ ಬಣ್ಣವ ತೂರಿ ಹರಿದು ಮೂಲದ ಬೆಳಕಿನಲಿ ಮೀಯಬೇಕು....waaw amazing....simply superb ಅಕ್ಕ '...ಅವನ ಹೊಗಳಿಕೆಗೆ ಮಿತಿಯೇ ಇರುತ್ತಿರಲಿಲ್ಲ .ಅಂತ ಹೊಗಳಿಕೆಗಳು..ನನ್ನ ತಿಳಿವಿಗೆ ಮಂಕುಬೂದಿ ಎರಚಿದವೇ? ಎಲ್ಲಾ ಗೊತ್ತಿದ್ದೂ...ಅವನ ಹಿರಿಯರ ದೃಷ್ಟಿಯಲ್ಲಿ ಒಳ್ಳೆಯವಳಾಗಿ ಉಳಿದುಕೊಳ್ಳೋದು ನನ್ನ ಅರಿವಿಗೆ ತೆರೆ ಎಳೆಯುವಷ್ಟು ಪ್ರಭ್ಲಲ ವಾಂಛೆ ಆಗಿಬಿಟ್ಟಿತ್ತೆ????.........ಆಗಿರಲೇ ಬೇಕು....ಇಲ್ಲದಿದ್ದರೆ ಗೊತ್ತಿದ್ದೂ ಗೊತ್ತಿದ್ದೂ ಅಂಥ ನಿರ್ಧಾರ ತಗೊಳ್ಳೋಕೆ ನಾನು ಅವನಿಗೆ ಹೇಳ್ತಾ ಇರಲಿಲ್ಲ.

ಲೇಖಕಿ, ಹಾಡುಗಾರ್ತಿ, ಸಮಾಜ ಸೇವಕಿ....ಜೊತೆಗೆ ಎಲ್ಲರಿಗೂ ಸಮಾಧಾನ ಹೇಳೋ counsellor ಅನ್ನೋ ಮಾತುಗಳು ಬೇರೆ ತಲೆಗೇರಿ ಕುಳಿತಿದ್ದವೇನೋ, ಅವ್ನು ಆವತ್ತು ಬಂದು "ಅಕ್ಕ.....ನೀವು ಆಡೋ ಪ್ರತಿಯೊಂದು ಮಾತನ್ನೂ ಯೋಚನೆ ಮಾಡಿಯೇ ಆಡ್ತೀರಿ ಅಂತ ಗೊತ್ತು...ಈ ಸಂದಿಗ್ದದಿಂದ ಕಾಪಾಡಿ"..... ಅಂತ ಕೇಳ್ದಾಗ...ನಂಗೂ ಅಹಂಕಾರ ಕಣ್ಣಿಗೆ ಬಟ್ಟೆ ಕಟ್ಟಿಬಿಟ್ಟಿತೋ ಏನೋ.


ಅರೆ..ನೋಡಬಾರದ.... ಹೇಗೆ ಮಗು ಜೊತೆ ತಾನೂ ಮಗು ಥರ ಆಡ್ತಾ ಇದಾನಲ್ಲ...ಏನೂ ಆಗೇ ಇಲ್ಲ ಅನ್ನೋ ಥರ.....!!!

******* ******** ********

ಅವ್ಳು ನಂಗೆ ಗೊತ್ತಿಲ್ಲದ ಹುಡುಗಿ ಏನಲ್ಲ....ತುಂಬಾ ಚೆಂದವಿರದಿದ್ರೂ ಬಂಗಾರದಂಥ ಮನಸ್ಸಿದೆ ಅವಳಿಗೆ. ನಾಲ್ಕು ವರ್ಷದಿಂದ ಇವನಷ್ಟೇ ನನ್ನ ಹಚ್ಹ್ಚಿಕೊಂಡಿದ್ದವಳು .ಅವತ್ತು ಇವನ ತಂದೆ ಮಾರುಕಟ್ಟೇಲಿ ಸಿಕ್ಕು ನೋಡಮ್ಮ, ನೀನಾದ್ರು ಸ್ವಲ್ಪ ಹೇಳು. ಏನೋ ಒಳ್ಳೆ ಸ್ನೇಹಿತರು ಅಂತ ಯಾವತ್ತೂ ಏನೂ ಅನ್ನಲಿಲ್ಲ ನಾವು, ಇವತ್ತು ನೋಡಿದ್ರೆ ಅವಳನ್ನ ಮಾಡುವೆ ಆಗ್ತೀನಿ ಅಂತಾನೆ , ಜಾತಿ ಅಲ್ಲ ಕುಲ ಅಲ್ಲ ..ಒಳ್ಳೆ ಹುಡುಗ ಇದೊಂದರಲ್ಲಿ ಹೀಗೆ ಮಾಡ್ತಿದಾನೆ ಸ್ವಲ್ಪ ಬುಧ್ಧಿ ಹೇಳು ಅಂದಿದ್ದಷ್ಟೇ ಕೊನೆ. ನನ್ನ ಮಾತುಗಳು ಅವರಿಗೆ ಬದಲಾದ ಕಾಲ ಘಟ್ಟದ ಬಗ್ಗೆ ವಿವರಿಸೋಕಾಗ್ಲಿ, ಇವರಿಬ್ಬರ ಹೊಂದಾಣಿಕೆ ಚೆಂದದ ಪ್ರೀತಿ ಬಗ್ಗೆ ತಿಳಿ ಹೇಳೋಕಾಗ್ಲಿ ಉಪಯೋಗಕ್ಕೆ ಬರ್ಲಿಲ್ಲ.....ಅಥವಾ ನಾನು ಪ್ರಯತ್ನ ಮಾಡಲೇ ಇಲ್ಲವೇನೋ...ಅದೇ ಇವ್ನು ಬಂದು ಕೇಳ್ದಾಗ ಮಾತ್ರ ಭಾಷಣ ಶುರು ಮಾಡಿಬಿಟ್ಟೆ......." ಯಾರಿಗೋ ಗೊತ್ತಿಲ್ಲದವರಿಗೆ....ದಾರೀಲಿ ಆಟ ಆಡುವಾಗ ಜಾರಿಬೀಳೋ ಮಗುಗೆ...ಟಿವಿ ಲಿ ಎಲ್ಲೋ ಏನೋ ಆಗಿ ಸಂಕಟ ಪಡ್ತಿರೋ ಮನುಷ್ಯರನ್ನ ನೋಡಿದರೆ ನಿಂಗೆ ನೋವಾಗುತ್ತೆ...ಅಷ್ಟು ಮೃದು ಮನಸಿನ ಹುಡುಗ ನೀನು , ಹೆತ್ತೋರಿಗೆ ನೋವಾದರೆ ಸಹಿಸ್ತೀಯ ಅಪ್ಪಿ? " ........

ಹಾಗನ್ನುತ್ತಲೇ ಸುಮ್ಮನೆ ನನ್ನ ಕಡೆ ನೋಡಿದ....ಪಾರ್ಕಿನಲ್ಲಿ ಹೂವು ಕಿತ್ತ ಮಗೂಗೆ ಯಾರದ್ರೂ ಜೋರು ಮಾಡಿದ್ರೆ...ಅವರೆಡೆಗೆ ಅದು ನೋಡೋ ಖೇದ, ಆಶ್ಚರ್ಯ, ಅನಿರೀಕ್ಷಿತ ಆಘಾತ ಎಲ್ಲ ಇತ್ತು ಆ ನೋಟದಲ್ಲಿ.ಸುಧಾರಿಸಿಕೊಂಡೆನೋ ಅಥವಾ ಗಮನಿಸಲೇ ಇಲ್ಲವೊ., ನಾನು ಮುಂದುವರೆಸಿದೆ...

" ಜೀವನದಲ್ಲಿ ಇವರನ್ನ ಬಿಟ್ಟು ಬದುಕೋಕೆ ಆಗೋದೇ ಇಲ್ಲ ಅಂತ ಕೆಲವರ ಬಗ್ಗೆ ಅನಿಸುತ್ತೆ ಕಣೋ ಆದ್ರೆ ಅದೆಲ್ಲ ಸತ್ಯ ಅಲ್ಲ.....ಸಮಯದ ಬಂದೂಕಿನ ಧಾಳಿಗೆ ಎದುರಾಗಿ ನಿಂತು ಜಯಿಸುವಂಥ ಯಾವ ಶಕ್ತಿಯೂ ಜಗತ್ತಿನಲ್ಲಿ ಇಲ್ಲ.....ಇವತ್ತು ಅನಿವಾರ್ಯ ಅನ್ನಿಸೋದು ನಾಳೆ ಅಗತ್ಯದ ಮಟ್ಟಕ್ಕೆ ಇಳಿದು....ನಾಳಿದ್ದು ಅನಗತ್ಯ ಅನ್ನಿಸಿ....ಮರುದಿನ ನಿರುಪಯುಕ್ತ ಅನ್ನಿಸುವುದು ಸಹಜ ಕಣೋ. ಅದಕ್ಕೆ ಹೇಳ್ತಿದೀನಿ, ನೀವಿಬ್ಬರೂ ಎಷ್ಟು ಹೊಂದಿಕೊಂದಿದೀರಿ, ಎಷ್ಟು ಪ್ರೀತಿ ಮಾಡ್ತೀರಿ...ಎಷ್ಟು ಪಕ್ವ ಮನಸ್ಸಿನ ಪ್ರೇಮ ನಿಮ್ಮಿಬ್ಬರದು ಅಂತ ಗೊತ್ತಿದ್ದೂ ಹೇಳ್ತಿದೀನಿ ಅಮ್ಮನ ಅಪ್ಪನ ಮನಸು ನೋಯಿಸಬೇಡ ಕಣೋ.....ಅವ್ಳು ಚಿನ್ನದಂಥ ಹುಡುಗಿ....ಯಾರಾದ್ರೂ ಒಳ್ಳೆ ಹುಡುಗನ್ನ ಮಾಡುವೆ ಆಗಿ ಸಂತೋಷವಾಗಿರ್ತಾಳೆ. ನೀನು ಅಪ್ಪ ಅಮ್ಮಗೆ ಇಷ್ಟ ಆಗೊಳನ್ನ ಮಾಡುವೆ ಆಗಿ ಚೆಂದಾಗಿ ಬದುಕು ಹುಡುಗ...ಅರ್ಥ ಆಗ್ತಿದ್ಯ ನನ್ನ ಮಾತು? "..........

******* ******** ********

ಅವತ್ತು ಅವ್ನು ಹೋದ ಒಂದು ವಾರಕ್ಕೆ ಅವಳೇ phone ಮಾಡಿದ್ಲು...

"ಅಕ್ಕ ನಮ್ಮಿಬ್ಬರಲ್ಲಿ ಯಾವತ್ತೂ ಒಂದು ಚಿಕ್ಕ ಅಸಮಾಧಾನ ಕೂಡ ಬಂದಿಲ್ಲ....ಜಗಳ ಅಂತೂ ಇಲ್ಲವೇ ಇಲ್ಲ...ಒಮ್ಮೆ ಕೂಡ ತಮಾಷೆಗೂ ನನ್ನ ನೋಯಿಸಿರ್ಲಿಲ್ಲ ಅವ್ನು....ಈಗ ಇದ್ದಕ್ಕಿದ್ದಂತೆ ದೂರ ಆಗ್ತಿದೀವಿ ಅಂದ್ರೆ ಎಷ್ಟು ಸಂಕಟ ಆಗಿರಬೇಕು ಅವ್ನಿಗೆ...ಯಾಕೆ ಅಂತಾನೂ ಕೇಳೋಕಾಗ್ಲಿಲ್ಲ ನನ್ನಿಂದ. ಅವ್ನು ನನ್ನ ಮದುವೆಯಾಗಿ ನಾವಿಬ್ಬರೂ ಸಂತೋಷವಾಗಿ ಬದುಕೋದಕ್ಕಿಂತ...ಅವ್ನು ಯಾವ ಕಾರಣಕ್ಕೆ ಮದುವೆ ಬೇಡ ಅಂದನೋ ಆ ವ್ಯಥೆಯಿಂದ ಅವ್ನು ಪೂರ್ತಿ ಪಾರಾಗಿ ನಿರಾಳವಾಗಿ ಉಸಿರಾಡುವಂತಾದ್ರೆ ಸಾಕು.ಆದ್ರೆ ಮದುವೆಯಾಗದೆ ಹಾಗೆ ಇರ್ತೀನಿ ಅಂತ ಹಠ ಮಾಡಿ ಈಗಾಗಲೇ ನೊಂದಿರೋ ಅಪ್ಪ ಅಮ್ಮಗೆ ಇನ್ನಷ್ಟು ನೋಯಿಸೋ ಶಕ್ತಿ ಹಾಗೂ ಹುಡುಗಿಯಾಗಿ ನಂಗೆ ಈ ವಿಷಯದಲ್ಲಿ ಅವ್ನಿಗೆ ಇರುವಷ್ಟು ನಿರ್ಧಾರ ತಗೊಳ್ಳೋ ಸ್ವಾತಂತ್ಯ್ರ ಎರಡೂ ಇಲ್ಲ. ಮೊನ್ನೆ ಅಪ್ಪ ಕರ್ಕೊಂಡು ಬಂದಿದ್ದ ಒಬ್ಬರ ಜೊತೆ ನಿಶ್ಚಿತಾರ್ಥ ಆಯ್ತು ".

******* ******** ********

ಅವತ್ತು ಹೋದವನು ಇವತ್ತು ಬಂದಿದಾನೆ ಕಡಿಮೆ ಏನಲ್ಲ ಒಂದು ವರ್ಷದ ನಂತರ...........

ತಡಿಯೋಕಾಗ್ತಿಲ್ಲ ಕೇಳೇ ಬಿಡ್ತೀನಿ...

"....ಅವತ್ತು ನಾನು ಹಾಗೆ ಹೇಳಬಾರದಿತ್ತು ಅನ್ನಿಸುತ್ತೆ ಕಣೋ....ನನ್ನಿಂದಾ ನೀವಿಬ್ಬರೂ ಇಷ್ಟು ನೊಂದುಕೊಳ್ಳೋ ಹಾಗಾಯ್ತು.....ಇಷ್ಟು ದಿನ ಹೇಗಿದ್ದ್ಯೋ...ಈಗ ಹೇಗಿದೀಯೋ ಪುಟ್ಟ..."

" ಹೇ ನಾನು ಅರಾಮಿದ್ದೀನಕ್ಕ......ತುಂಬಾನೇ ತಣ್ಣಗೆ....ಚೆನ್ನಾಗಿದ್ದೀನಿ.."

" ನಿಜ ಹೇಳು ಸುಮ್ಮನೆ ನನ್ನ ಸಮಾಧಾನಕ್ಕೆ ಮಾತಾಡಬೇಡ...."

" ನಿಜಾನೆ ಅಕ್ಕ.......ನೋಡೂ ..... ಎಂಥ ಸಂಧರ್ಬಗಳಲ್ಲೂ ಸಹಜವಾಗಿರ್ಬೇ ಕಂದ್ರೆ ..ಕೆಲವು ಸಣ್ಣ ಸಣ್ಣ ಅಭ್ಯಾಸಗಳು ಬೇಕಾಗುತ್ತವೆ....infact ಅಭ್ಯಾಸಗಳಿಂದಲೇ ಕಲ್ತುಕೋಬೇಕು ಅವನ್ನ. ಗೊತ್ತಿರ್ಲಿಲ್ಲ ನಂಗೂ ಇವೆಲ್ಲ ಉಪಯೋಗಕ್ಕೆ ಬರುತ್ತವೆ ಅಂತ ಆದ್ರೆ ಈಗ ಗೊತ್ತಾಗ್ತಿದೆ ಅಂಥ ಅಭ್ಯಾಸಗಳ ಶಕ್ತಿ ಏನು ಅಂತ....ಬಸ್ನಲ್ಲಿ ಗೆಳೆಯರೆಲ್ಲ ಒಟ್ಟಿಗೆ ಕೂತುಕೊಬೇಕು ಅಂತ ಓದಿ ಹೋಗಿ ಸೀಟ್ ಹಿಡಿದಿರ್ತೀಯ.....ಆದ್ರೆ ಕೊನೆಗೆ ಸ್ವಲ್ಪ ಹೆಚ್ಚು ವಯಸ್ಸಾದವರು ಒಬ್ಬರು ಬಂದು ಮುಂದೆ ನಿಲ್ತಾರೆ , ನೀನು ಜಾಗ ಬಿಟ್ಟು ಕೊಡ್ತೀಯ.ಗೆಳೆಯರೊಟ್ಟಿಗೆ ಕೂರೋ ಖುಷಿನ ಆ ಕ್ಷಣದಲ್ಲಿ ಸುಮ್ಮನೆ ಕೊಂದು ಬಿಡ್ಬೇಕು....ಇದೊಂದು ಚಿಕ್ಕ ಉದಾಹರಣೆ ಅಷ್ಟೇ.ಅಗಾಗ ಇಂಥ ಚಿಕ್ಕ ಸಂತೋಷಗಳನ್ನ ಕೊಲ್ತಾ ಇರ್ಬೇಕು....ಸಾಯಿಸ್ತ ಇರ್ಬೇಕು....

ತ್ಯಾಗ ಅನ್ನೋ ಪದ ಇಲ್ಲಿ ಬೇಡ...ಬಿಡೋದಂದ್ರೆ ಸುಮ್ಮನೆ ಬಿಡೋದಕ್ಕ....ಏನೋ ಕೆಲಸ ಮಾಡುವಾಗ ಜೋರಾಗಿ ಕಚ್ಚಿ ಎಗ್ಗಿಲ್ಲದೆ ರಕ್ತ ಹೀರುತ್ತ್ತಿರೋ ಸೊಳ್ಳೆ ನೋಡಿದಾಗ ಅದನ್ನ ಹೊಡೆಯದೆ ಒಮ್ಮೊಮ್ಮೆ ...ಉಫ್ಫ್ಫ್ ಅಂತ ಊದಿ ಓಡಿಸಿ ಬಿಟ್ಟ್ಟಾಕ್ತೀವಲ್ಲವ ಹಾಗೆ....ಒಂದು ಚಿಕ್ಕ ಪ್ರತಿಕ್ರಿಯೆಯೂ ಇಲ್ಲದಂತೆ....ಒಳ್ಳೆ ಬಟ್ಟೆ ತಗೋಬೇಕು ಅನ್ನಿಸ್ದಾಗ ಜೇಬಲ್ಲಿ ದುಡ್ಡು ಇದ್ದರೂ ಸಹ...ಅದು ಬೇಡ ಇದೇ ಸಾಕು ಅಂತ ಕಡಿಮೆ ಬೆಲೆಯಾ ಬಟ್ಟೆ ತರುವಂತೆ...ಸುಮ್ಮನೆ ಕೊಲ್ಲಬೇಕು ಚಿಕ್ಕ ಚಿಕ್ಕ ಅಸೆಗಳನ್ನ ....ದೊಡ್ಡ ದೊಡ್ಡ ಕಷ್ಟಗಳನ್ನ ಗೆಲ್ಲೋ ಶಕ್ತಿ ಬರುತ್ತಕ್ಕ್ಕಾ ...ಗೆಲ್ಲೋ ಪ್ರಶ್ನೇನೆ ಇಲ್ಲ..ನಿರಾಸೆಯನ್ನೇ ಹಿಂದಿನ ದಿನದ ಬಟ್ಟೆ ಕಳಚುವಂತೆ ಕಳಚಿ ಎಸೆದುಬಿಡಬಹುದು .

ಇದು JK ಅನ್ನೋ ಮಹಾನ್ ಚಿಂತಕ ತೋರಿದ ದಾರಿ..ಅವರು ಹೇಳೋ ಥರ ವಾಂಛೆಗಳನ್ನ ಸುಮ್ಮನೆ ಬಿಟ್ಟುಬಿಡೋದು ಅಥವಾ ಸತ್ತುಬಿದೋ ಉಪಾಯ ಗೊತ್ತಿರಲಿಲ್ಲ ಮೊದ್ಲು, ಆದ್ರೆ ಚಿಕ್ಕ ಚಿಕ್ಕ ಸಂತೋಷಗಳನ್ನ ಬಿಟ್ಟು ಕೊಟ್ಟು ಅಭ್ಯಾಸ ಇತ್ತು. ಏನಾದ್ರೋ ಕೊಡುವಾಗ ಸಿಗೋ ಖುಷಿ ಅದನ್ನ ಹೋರಾಡಿ ಇಟ್ಟುಕೊಳ್ಳೊದರಲ್ಲಿ ಇಲ್ಲ ಅಂತ ಸುಮಾರು ಸಾರಿ ಅನ್ನಿಸ್ತಿತ್ತು.ಪುಟ್ಟ ಪುಟ್ಟ ಸತ್ತುಹೋಗುಗುವಿಕೆಗಳು ಎಂಥ ನೆನಪನ್ನಾದ್ರೂ ಅಳಿಸಿ ಹಾಕೋ ಶಕ್ತಿ ಕೊಡ್ತಾವೆ....ಎಂಥ ನೋವುಗಳನ್ನಾದ್ರೂ ಕಳಚಿ ಎಸೆಯಬಹುದಾದ ಧ್ರುಡತೆ ತಂದು ಕೊಡ್ತಾವೆ. ಇಂಥದ್ದಕ್ಕೆಲ್ಲ ಎಳೆಯ ಮನಸ್ಸು ಬೇಕು ಅಂತಾರೆ JK. ಎಳೆಯಮಸ್ಸು ಮಾತ್ರ ಯಾವಾಗ ಬೇಕಾದ್ರೂ ಸ್ವಇಚ್ಚೆಯಿಂದ ಸಾಯೋದಕ್ಕೆ....ಸುಮ್ಮನೆ ಬಿಟ್ಟು ಬಿಡೋದಕ್ಕೆ ಸಿಧ್ಧವಾಗಿರುತ್ತದಂತೆ....ಕಲಿತದ್ದನ್ನ ಬಿಟ್ಟು ಕೊಡೋದು ಅದಕ್ಕೆ ಮಾತ್ರ ಸಾಧ್ಯ ಅಂತೆ.ಹಾಗೇ ಅಕ್ಕ....ನೋಡೀಗ ಸುಮ್ಮನೆ ಸತ್ತುಹೊಗಿದ್ದೀನಿ ....simply given up everything......ಸುಮ್ಮನೆ ...
...ಹ್ಮ್ಮ್ಮ್ ತಾಯಿ ಹೊಟ್ಟೆ ತಾಳ ಹಾಕ್ತಿದೇ ........ತಲೆ ಕೆಡಿಸ್ಕೊಳ್ಳೋದು ಬಿಟ್ಟು ಬೇಗ ಬೇಗ ಏನಾದ್ರು ಮಾಡಿಕೊಟ್ಟರೆ ಮಹಾ ಪ್ರಸಾದ ಅಂತ ತಿಂದು ಕೃತಾರ್ಥ ರಾಗುತ್ತೇವೆ :-) ....".

ಅವ್ನತಲೆಗೊಂದು ಮೊಟಕಿ....ಅವನಿಗಿಷ್ಟವಾದ ಹೆಸರುಬೇಳೆ ಪಾಯಸ ಮಾಡೋಕೆ ಹೊರಟೆ...............

ಇವ್ನು ಹೇಳ್ತಿರೋದೆಲ್ಲ ನಿಜಾನ...ನಿಜಕ್ಕೂ ಅವ್ನು ಹೇಳ್ಕೋತ ಇರೋ ಥರ ಅಷ್ಟೊಂದು ತಣ್ಣಗೆ ಇದ್ದುಬಿಟ್ಟಿದಾನ ? ಈ ಇಬ್ಬರು ಹುಡುಗರ ಮುಂದೆ ನಾನು ತುಂಬಾ ಕುಬ್ಜಳಾಗಿಬಿಟ್ಟೆ ಅನ್ನಿಸ್ತಿದೆ...ಪ್ರೀತಿ ಸ್ಪುರಿಸುವ ಪದ್ಯಕ್ಕೆ ರಾಗ ಹಾಕಿ....ಭಾವದ ಆಳ ತಲುಪಿ ಜೀವ ರಸ ಹೊಮ್ಮಿಸುವುದಕ್ಕೂ.....ವಾಸ್ತವದಲ್ಲಿ ಪ್ರೀತಿಯನ್ನ ಅರಿತು ನಿರ್ಧಾರಗಳನ್ನ ತಗೊಳ್ಲೋದಕ್ಕೂ ಎಷ್ಟೊಂದು ವ್ಯತ್ಯಾಸ...atleast ಇವರಿಬ್ಬರಂತೆ ಬದುಕನ್ನಾದ್ರೂ ಪ್ರೀತಿಸೋದು ಕಲ್ತಿದೀನ ನಾನು? ಇವರಿಗಿರುವಷ್ಟು ಬದುಕಿನೆಡೆಗೆ ನೋಡುವ ಪ್ರೌಢತೆ ಆದರೂ ಇದೆಯಾ ನನಗೆ?........ಮತ್ತೆ ಉತ್ತರ ಅಸ್ಪಷ್ಟ.

..............ಚೆನ್ನಾಗಿ ಗೋಡಂಬಿ ಹಾಕಿದ ಪಾಯಸ ಅವನಿಗಿಷ್ಟ....ಇಲ್ಲಿ ಎಲ್ಲೋ ಇಟ್ಟಿದ್ನಲ್ಲ ಗೋಡಂಬಿ ಡಬ್ಬ.....ಇಟ್ಟಿದ್ದು ಯಾಕೆ ಒಂದು ಕಡೆ ಇರೋಲ್ಲ ಇಲ್ಲಿ....ನಾನೆ ಓಡಾಡೋ ಅಡುಗೆ ಮನೇಲಿ.....................

******* ******** ********